ಚಂದ್ರಕೀರ್ತಿ 1

ಪರಮಾಗಮಸಾರ ಎಂಬ ಕಂದವೃತ್ತಗಳನ್ನೊಳಗೊಂಡ ಒಂದು ಕನ್ನಡ ಗ್ರಂಥದ ಕರ್ತೃ. ಜೈನ. ಈತನ ಕಾಲನಿರ್ಣಯಕ್ಕೆ ಯಾವುದೇ ಆಧಾರ ದೊರೆಯುವುದಿಲ್ಲ. ಕವಿಚರಿತೆಕಾರರು ಈತ ಸುಮಾರು 1400ರಲ್ಲಿದ್ದಿರಬಹುದೆಂದು ಹೇಳುತ್ತಾರೆ. ಈತನ ಗ್ರಂಥ ಆತ್ಮಸ್ವರೂಪ, ವೈರಾಗ್ಯ-ಮುಂತಾದ ವಿಷಯಗಳನ್ನೊಳಗೊಂಡಿದೆ. ಇದರಲ್ಲಿ 132 ಕಂದವೃತ್ತಗಳಿವೆ. ತನ್ನ ಗ್ರಂಥಕ್ಕೆ ಆ ಹೆಸರು ಬರಲು ಕಾರಣವನ್ನು ಕವಿ ಹೀಗೆ ವಿವರಿಸುತ್ತಾನೆ.

ಪರಮಜಿನೇಶ್ವರ ಮತದೊಳ್ | ಪರಿಕಿಸಿ ಸಾರಾಯಮಪ್ಪುವಂ ಕೊಂಡು ಕರಂ || ವಿರಚಿಸಿತಪ್ಪುದ ¾Âಂದಂ | ಪರಮಾಗಮಸಾರಮಾದುದೀ ಕೃತಿಯಂದಂ ||
		ಮುನಿಪತಿ ದರ್ಶನಶುದ್ಧಂ |
		ವಿನುತಯಶಂ ಶೀಲರತ್ನನಚಳಿತಧೈರ್ಯಂ ||
		ಮನಸಿಜಮದಕರಿಸಿಂಹಂ |
		ವಿನಯನಿಧಾನಂ ಸರಸ್ವತೀಮುಖತಿಲಕಂ ||
		ಯಮನಿಯಮಧ್ಯಾನಯುತಂ |
		ಸಮಚಿತ್ತಂ ತತ್ತ್ವವೇದಿ ವೈರಾಗ್ಯಯುತಂ| 
	ಶಮಿತ ಕಷಾಯಂ ನಿಸ್ಪøಹ |
		ನಮಲಂ ಭವ್ಯಂ ಸರಸ್ವತೀಮುಖತಿಲಕಂ ||
		ಎಂಬೀ ಎರಡು ಪದ್ಯಗಳಲ್ಲಿ ಕವಿ ತನ್ನ ಗುಣಾತಿಶಯಗಳನ್ನು ಹೇಳಿಕೊಂಡಿದ್ದಾನೆ. ಸರಸ್ವತೀಮುಖತಿಲಕಂ, ಕವಿಜನಮಿತ್ರ ಎಂಬುವು ಈತನ ಬಿರುದುಗಳಿದ್ದಿರಬಹುದು.
(ಎಸ್.ಬಿ.ಎಸ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ